ಒಬ್ಬ ವ್ಯಕ್ತಿಯ ನಡೆತೆ,ಕೌಶಲ್ಯ,ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದ್ದು ಆ ಹಿನ್ನೆಲೆಯಲ್ಲಿ ಶಿಕ್ಷಕ ವೃತ್ತಿ ತುಂಬಾ ಶ್ರೇಷ್ಠವಾದದ್ದು ಎಂದು ಎಪಿಜೆ ಅಬ್ದುಲ್ ಕಲಾಂ ಹೇಳಿರುವ ಮಾತು ಅಕ್ಷರಶ ಸತ್ಯ.

ಯಾವೊಬ್ಬ ಮಗನು ಜನ್ಮ ಕೊಟ್ಟ ತಾಯಿಯನ್ನು, ಬಾಳು ಕೊಟ್ಟ ತಂದೆಯನ್ನು ಹಾಗೆಯೇ ಅಕ್ಷರ ಕಲಿಸಿದ ಗುರುಗಳನ್ನು ಎಂದಿಗೂ ಮರೆಯುವುದಿಲ್ಲ. ನಮ್ಮ ಜೀವನದ ದಾರಿಗೆ ಅರ್ಥ ಕಲ್ಪಿಸಿ ಸ್ವತಂತ್ರವಾಗಿ ತೀರ್ಮಾನ ಕೈಗೊಳ್ಳಲು ನಮ್ಮನ್ನು ವಿದ್ಯಾವಂತರಾಗಿಸಿದ ಗುರುಗಳೇ ಶ್ರೇಷ್ಠರು. ತಮ್ಮ ಜ್ಞಾನದ ಭಂಡಾರವನ್ನು ಧಾರೆ ಎರೆದು ನಮ್ಮ ಬದುಕಿನ ಅಡಿಪಾಯಕ್ಕೆ ಕಲ್ಲಾದ ಗುರುಗಳನ್ನು ವಂದಿಸುತ್ತಾ,ಗೌರವಿಸುತ್ತಾ ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಶ್ರೀ ಚಂದ್ರ ನಾರಾಯಣ ಬಿಲ್ಲವ( ಸಿ, ಎನ್, ಬಿಲ್ಲವ) ಅವರ ಪರಿಚಯವನ್ನು ನಿಮ್ಮ ಮುಂದಿಡುತ್ತಿದ್ದೇನೆ.

ಶಿರೂರು ದುಗ್ಮರಿ ಮನೆ ಶ್ರೀಮತಿ ವೆಂಕಮ್ಮ ಮತ್ತು ದಾಸನಾಡಿ ದಿ II ನಾರಾಯಣ ಪೂಜಾರಿಯವರ ಎರಡನೇ ಪುತ್ರನಾಗಿ ಜುಲೈ 25 1969 ರಲ್ಲಿ ಜನಿಸಿದ ಇವರು ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರ ಮುದ್ದಿನ ಸಹೋದರ.
ಶ್ರೀಯುತರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಶಿರೂರು ಮಾದರಿ ಶಾಲೆಯಲ್ಲಿ,ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಹಡುವಿನ ಕೋಣೆಯಲ್ಲಿ ಮುಗಿಸಿ ,ಪಿಯು ಶಿಕ್ಷಣವನ್ನು ಬೈಂದೂರು ಪದವಿ ಪೂರ್ವ ಕಾಲೇಜಿನಲ್ಲಿ, ತದನಂತರ ಪ್ರಾಯೋಗಿಕ ಶಿಕ್ಷಣವನ್ನು ಜನತಾ ಸಂಯುಕ್ತ ಪದವಿ ಪೂರ್ವ ಕಾಲೇಜು ಶಿರಾಲಿಯಲ್ಲಿ ವೃತ್ತಿಪರ ಶಿಕ್ಷಣ ಹಾಗೂ ಹಿಂದಿ ಪದವಿ ಪಡೆದರು.

ಒಬ್ಬ ವಿದ್ಯಾರ್ಥಿಯ ಪ್ರತಿಭೆ ಮತ್ತು ಕಲಿಕೆಯ ಗುಣ ತಂದೆ ತಾಯಿಗಿಂತ ಒಬ್ಬ ಗುರುಗಳಿಗೆ ಮೊದಲು ತಿಳಿದುಬಿಡುತ್ತದೆ. ಒಬ್ಬ ವಿದ್ಯಾರ್ಥಿಯ ಸೂಕ್ತ ಪ್ರತಿಭೆ ಬುದ್ದಿವಂತಿಕೆಯ ಪರಾ ಕಾಷ್ಟೆಯನ್ನು ಪತ್ತೆ ಹಚ್ಚುವ, ಶೋಧಿಸುವ ಗುಣಗಳು ಕೆಲವು ಶಿಕ್ಷಕರಲ್ಲಿ ಇರುತ್ತದೆ.
ಅಂತಹ ಶಿಕ್ಷಕರ ಸಾಲಿಗೆ ನಮ್ಮ ಚಂದ್ರ ಬಿಲ್ಲವ ಸರ್ ಸೇರುತ್ತಾರೆ. ಶ್ರೀಯುತರಿಗೆ ವಿದ್ಯಾರ್ಥಿಗಳ ಬುದ್ಧಿವಂತಿಕೆ, ಪ್ರತಿಭೆಯ ಲಕ್ಷಣಗಳು ಅವರ ಗ್ರಹಿಕಾ ಶಕ್ತಿಗೆ ತೋರಿಬಿಡುತ್ತದೆ. ಕಲ್ಲನ್ನು ಸುಂದರ ಶಿಲ್ಪವನ್ನಾಗಿ ಮಾಡುವ ಕಲೆ ಇವರಲ್ಲಿದೆ. ಸ್ವತಃ ಬಹುಮುಖ ಪ್ರತಿಭೆಯ ಶಿಕ್ಷಕರಾದ ಇವರಿಗೆ ಆಸಕ್ತ ಪ್ರತಿಭೆಗಳು ಸಿಕ್ಕರಂತೂ ಸುಪ್ತ ವಾಗಿರುವ ಅವರ ಕಲೆ ಬೆಳಕಿಗೆ ಬಂದೇ ಬರುತ್ತದೆ.

ಬದುಕು ನಿಂತ ನೀರಾಗಬಾರದು ಎಂಬ ಸಿದ್ಧಾಂತವನ್ನು ನಂಬಿ ಬದುಕಿದವರು ನಿಸ್ವಾರ್ಥಪರ ಸೇವೆಗೆ ಹೆಸರಾದವರು ಈ ನಮ್ಮ ಗುರುಗಳು ತನ್ನಲ್ಲಿರುವ ಪ್ರತಿಭೆಯನ್ನು ಬೇರೆಯವರಿಗೆ ಧಾರೆ ಎರೆದ ಉದಾಹರಣೆಗಳು ಹಲವಾರು.
ಕಾಯಕವೇ ಕೈಲಾಸ ಎಂಬ ನಾಣ್ಣುಡಿಯಂತೆ ಬದುಕಿದವರು. ನಮ್ಮ ಕರ್ತವ್ಯದಲ್ಲಿ ಯಶಸ್ಸು ಕಾಣಬೇಕಾದರೆ ನಮ್ಮ ವೃತ್ತಿ ಬದುಕನ್ನು ಅತ್ಯಂತ ಗೌರವ ಪ್ರೀತಿಯಿಂದ ಕಂಡಾಗ ಮಾತ್ರ ಸಾಧ್ಯ ಎಂಬುದು ಇವರು ಕೊಂಡುಕೊಂಡ ಸತ್ಯ ವಿಚಾರಗಳು. ಇವರೇ ಹೇಳುವಂತೆ ಶಿಕ್ಷಕರೆಂದರೆ ಕೇವಲ ಮಾತಿನ ಬಂಡವಾಳ ಎಂದರ್ಥವಲ್ಲ. ಮಾತನ್ನು ಇತಿಮಿತಿಯಲ್ಲಿಟ್ಟು ಜ್ಞಾನದ ಆಗರವನ್ನಾಗಿಸಿದಾಗ ಮಾತ್ರ ಸಾಧ್ಯ. ವೃತ್ತಿಯೊಂದಿಗೆ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿರುವ ಇವರಿಗೆ ಹಲವಾರು ಸನ್ಮಾನಗಳು ಅರಸಿ ಬಂದಿದೆ.

ಉತ್ತಮ ಶಿಕ್ಷಕ ಪ್ರಶಸ್ತಿಯು ಎಂದೋ ಚಂದ್ರಬಿಲ್ಲವ ಅವರವರಿಗೆ ಸಿಗಬೇಕಾಗಿತ್ತು. ಪ್ರಶಸ್ತಿ ತಡವಾದರೂ ಸೂಕ್ತ ವ್ಯಕ್ತಿಯನ್ನು ಆರಿಸಿ ಬಂದಿರುವುದು ಸಂತೋಷದ ಹಾಗೂ ಹೆಮ್ಮೆಯ ವಿಷಯವಾಗಿದೆ.ಚಂದ್ರ ಬಿಲ್ಲವ ವೃತ್ತಿ ಬದುಕಿನಲ್ಲಿ ಪ್ರಥಮವಾಗಿ ಪಾದರ್ಪಣೆ ಮಾಡಿದ್ದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಗರಹಳ್ಳಿಯಲ್ಲಿ( ಬೆಂಗಳೂರು ವಲಯ ). ನಾಲ್ಕು ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿ ನಂತರ ವರ್ಗಾವಣೆಗೊಂಡು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮದ್ದೋಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ತದನಂತರ ದೊಂಬೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಬಳಿಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರೆಶಿರೂರು ನಂತರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈಕಳ ಅಲ್ಲಿಂದ 4 ವರ್ಷಗಳ ಕಾಲ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಹೆಮ್ಮಾಡಿಯಲ್ಲಿ ಸೇವೆ ಸಲ್ಲಿಸಿದ ಬಳಿಕ ನಮ್ಮ ಪಿ ಎಂ ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ 11 ಜೂನ್ 2018 ರಂದು ವರ್ಗಾವಣೆಗೊಂಡು ಸೇವೆ ಆರಂಭಿಸಿ 10 ವರ್ಷದ ಪೂರ್ಣಗೊಂಡು ಹನ್ನೊಂದನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಒಟ್ಟಾರೆ 31 ವರ್ಷಗಳ ಸುಧೀರ್ಘ ಸೇವೆ.

ತಮ್ಮ ಸೇವಾವಧಿಯಲ್ಲಿ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರೊಂದಿಗೆ, ಉತ್ತಮ ಬಾಂಧವ್ಯ ಹೊಂದಿದ್ದು, ಶಾಲಾ ಏಸ್. ಡಿ. ಎಂ. ಸಿ, ,ಹಳೆ ವಿದ್ಯಾರ್ಥಿ ಸಂಘದೊಂದಿಗೆ ಶಾಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದರೊಂದಿಗೆ ಪಾಲಕರ -ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರಾಗಿದ್ದು, 2021 -22ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಇವರು ಈ ಹಿಂದೆ ಶಿಕ್ಷಕ ಕಲ್ಯಾಣ ಇಲಾಖೆಯವರು ನಡೆಸುವ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಯಲ್ಲಿ ಸತತವಾಗಿ 10 ಬಾರಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿ ತಾಲೂಕಿನಿಂದ ಜಿಲ್ಲೆಗೆ ಆಯ್ಕೆ ಹಾಗೂ ಅನೇಕ ಬಾರಿ ಪ್ರಥಮ ದ್ವಿತೀಯ ಬಹುಮಾನ ಪಡೆದು ಮೂರು ಬಾರಿ ರಾಜ್ಯಮಟ್ಟದಲ್ಲಿ ಸ್ಪರ್ಧಿಸಿ ಬಹುಮಾನ ಪಡೆದಿರುತ್ತಾರೆ.

2002ರ ಉತ್ತಮ ಜನಗಣತಿ ಕಾರ್ಯಕ್ಕೆ ರಾಷ್ಟ್ರಪತಿ ಬೆಳ್ಳಿ ಪದಕ ಅಲಂಕರಿಸಿದ ಹೆಗ್ಗಳಿಕೆ ಇವರದ್ದು.ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆ,ನಾವೀನ್ಯ ಪದ್ಧತಿ ತೋಟಗಾರಿಕೆ, ಯೋಗ,ಕ್ರೀಡೆ,ಸ್ಕೌಟ್ ಮುಂತಾದ ಸಂಘ ಸಂಸ್ಥೆಗಳಲ್ಲಿತಮ್ಮನ್ನು ತೊಡಗಿಸಿಕೊಂಡು ಕಲೆ,ಸಾಹಿತ್ಯ, ಮರಳು ಶಿಲ್ಪ, ಸಿಮೆಂಟ್ ಶಿಲ್ಪ ರಚನೆಗಳು ಹಾಗೂ ವಿದ್ಯಾರ್ಥಿಗಳಿಗೆ ಮುಖವಾಡ ತಯಾರಿಕೆ ಕರಕುಶಲ ತಯಾರಿಕೆ, ಪ್ರತಿ ವರ್ಷ ವಿನೂತನ ಯೋಜನೆ ಮೂಲಕ ಆಕರ್ಷಕ ಕಲಿಕೆಗೆ ಒತ್ತುಕೊಟ್ಟು ಬೇಸಿಗೆ ಶಿಬಿರ ವಾರ್ಷಿಕ ಕಾರ್ಯಕ್ರಮ, ನಾಟಕ ಯಕ್ಷಗಾನ ಹೊರ ಸಂಚಾರ ಪ್ರವಾಸ ಹೀಗೆ ಎಲ್ಲ ಸ್ಥರದಲ್ಲೂ ತಮ್ಮನ್ನ ತೊಡಗಿಸಿಕೊಂಡಿರುವ ಇವರು ಪಿ ಎಂ ಶ್ರೀ ಶಾಲೆಯ ನೋಡಲ್ ಶಿಕ್ಷಕರಾಗಿದ್ದು ಈ ವರ್ಷದ ಅತ್ಯುತ್ತಮ ಪಿಎಂ ಶ್ರೀ ಶಾಲಾ ಪ್ರಶಸ್ತಿ ಶಾಲೆಗೆ ಲಭಿಸಿದ್ದು ಶಿಕ್ಷಕ ವೃಂದದ ಜೊತೆಗೆ ಸಹಕರಿಸಿರುವುದು, ಈ ಎಲ್ಲಾ ಕಾರ್ಯಗಳನ್ನು ಗಮನಿಸಿ 20242ನೇ ಸಾಲಿನ ಕರ್ನಾಟಕ ಸರ್ಕಾರದ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಗೆ ಭಾಜನರಾಗಿರುವ ಇವರು ನಮ್ಮೆಲ್ಲರ ಪ್ರೀತಿ ಪಾತ್ರರಾಗಿರುವ ಸಿ.ಎನ್.ಬಿಲ್ಲವ ನನ್ನ ಗುರುಗಳ ಈ ಸಾಧನೆಯನ್ನು ಪರಿಚಯಿಸಲು ನನಗೆ ಹೆಮ್ಮೆ.
ಏಕೆಂದರೆ 90ರ ದಶಕದ ಆಸುಪಾಸು. ನನಗೆ ಹಸಿವಿತ್ತು ಬಡತನದ ಭೂತ ನನ್ನ ಬೆನ್ನೆ ಹಿಂದೆ ಬಿದ್ದಿತ್ತು. ಹಾಗಾಗಿ ಮುಂಬೈಗೆ ಹೋಗಿ ಹಗಲಲ್ಲಿ ದುಡಿದು ರಾತ್ರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಭಾಗ್ಯ ನಮ್ಮದಾಗಿತ್ತು.ಚಂದ್ರ ಬಿಲ್ಲವರು ಆಗಷ್ಟೇ ಟಿಸಿಎಚ್ ಮುಗಿಸಿ ಬದುಕು ಕಟ್ಟಿಕೊಳ್ಳಲು ಮುಂಬೈಗೆ ಬಂದಿದ್ದರು. ಹಗಲಲ್ಲಿ ಒಂದು ಶಾಲೆಯಲ್ಲಿ ಕಲಿಸುತ್ತಾ, ರಾತ್ರಿ ನಾವು ಓದುತ್ತಿರುವ ಬಿಲ್ಲವರ ಅಸೋಸಿಯೇಷನ್ ಸಂಚಾಲಿತ ಗುರುನಾರಾಯಣ ರಾತ್ರಿ ಶಾಲೆಗೆ ನಿಯುಕ್ತಿ ಗೊಂಡಿದ್ದರು.

ಶ್ರೀಯುತರು ನಮಗೆ ರಾತ್ರಿ ಶಾಲೆಯಲ್ಲಿ ಗುರುಗಳಾಗಿರದೆ ಒಬ್ಬ ಹಿರಿಯ ಅಣ್ಣನಂತೆ ಇದ್ದರು. ಮಕ್ಕಳ ಪತ್ರಿಕೆಗಳಾದ ಬಾಲಮಂಗಳ, ಚುಟುಕು, ಚಂದಮಾಮ ದಂತಹ ಪತ್ರಿಕೆಗಳನ್ನು ತಂದು ಕಥೆಗಳನ್ನು ವಿವರಿಸುತ್ತಾ ಬರವಣಿಗೆ ಹೇಗೆ ಇರಬೇಕೆಂದು ಅಂದು ನಮಗೆ ಹೇಳಿಕೊಟ್ಟವರು.
ಆ ದಿನದ ಅವರ ಪ್ರೇರಣೆ, ಇಂದು ನಾನು ಸಮಾಜ ಸೇವಕರು, ಬಾಲ ಪ್ರತಿಭೆ, ವ್ಯಕ್ತಿ ಪರಿಚಯದಂತಹ ಲೇಖನ ಬರೆಯುವನಾಗಿ ನಾನು ಗುರುತಿಸಿಕೊಂಡಿದ್ದರೆ ಇದಕ್ಕೆಲ್ಲ ಮೂಲ ಕಾರಣ.

ನನ್ನ ಲೇಖನದ ಮೂಲಕ ಹಲವಾರು ಬಾಲ ಪ್ರತಿಭೆ, ಕೆಲವು ಸಮಾಜ ಸೇವಕರು ಮುಖ್ಯವಾಹಿನಿಗೆ ಬಂದಿದ್ದಿದ್ದರೆ, ಅದರ ಪೂರ್ಣ ಯಶಸ್ಸು ಶ್ರೀಯುತ ಚಂದ್ರ ಬಿಲ್ಲವ ಅವರದು ಪಾಲಿದೆ. ಪ್ರಸ್ತುತ ಶಿರೂರು ವಾಸವಾಗಿರುವ ಚಂದ್ರಎನ್ ಬಿಲ್ಲವ ಅವರು ಪತ್ನಿ ಸೀತಾ,ಇಬ್ಬರು ಹೆಣ್ಣು ಮಕ್ಕಳ ಸುಖೀ ಸಂಸಾರ. ಹಿರಿಮಗಳು ಸಿಂಚನ ಮದುವೆಯಾಗಿ ಪತಿ ಭರತ್ ಜೊತೆ ಇದ್ದರೆ, ಇನ್ನೊಬ್ಬಳು ಮಗಳು ತನ್ವಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾಳೆ.

ಸರ್, ನಿಮ್ಮ ಸಾಮಾಜಿಕ ಕಾರ್ಯಗಳು ಹೀಗೆ ಸಾಗುತ್ತಿರಲಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಿಮ್ಮ ಮಾರ್ಗದರ್ಶನ ಸದಾ ಸಿಗುತ್ತಿರಲಿ, ಬಡ ವಿದ್ಯಾರ್ಥಿಗಳ ಶ್ರೇಯಾ ಅಭಿವೃದ್ಧಿ ನಿಮ್ಮ ಕಾಯಕ ಸಮಾಜ ಸೇವೆ ಹೀಗೆ ಮುಂದುವರೆಯುತ್ತಿರಲಿ ಎನ್ನುವುದು ನಮ್ಮ ಆಶಯ. ರಾಜ್ಯ ಪ್ರಶಸ್ತಿ ಪುರಸ್ಕೃತರಾದ ನಿಮಗೆ ಮತೊಮ್ಮೆ ಅಭಿನಂದನೆಗಳು
✍ಈಶ್ವರ್ ಸಿ.ನಾವುಂದ









