ಗಂಗೊಳ್ಳಿ(ನ,27) : ದಿನವೂ ಹತ್ತಾರು ಮಕ್ಕಳನ್ನು ತಮ್ಮ ಸ್ವಂತ ಮನೆಯ ಮಕ್ಕಳಂತೆ ಕಾಳಜಿಯಿಂದ ಆರೈಕೆ ಮಾಡುವ, ಅಕ್ಷರದ ಅರಿವು ಮೂಡಿಸುವ, ಸಂಸ್ಕೃತಿಯನ್ನು ಕಲಿಸುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಕಾರ್ಯ ಅತ್ಯಂತ ಶ್ರೇಷ್ಠವಾದದ್ದು ಮತ್ತು ಅಭಿನಂದನನೀಯವಾದದ್ದು ಎಂದು ಗಂಗೊಳ್ಳಿಯ ಪರ್ಸಿನ್ ಮೀನುಗಾರರ ಸ್ವಸಹಾಯ ಸಂಘದ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಮಡಿವಾಳ ಅಭಿಪ್ರಾಯಪಟ್ಟರು.

ಅವರು ಗಂಗೊಳ್ಳಿಯ ಶ್ರೀ ನಾರಾಯಣ ಗುರು ಜನಸೇವಾ ಬಳಗ (ರಿ.)ವತಿಯಿಂದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ರೋಟರಿ ಸಭಾಂಗಣದಲ್ಲಿ ಕಳೆದ ಭಾನುವಾರ ನಡೆದ ಗಂಗೊಳ್ಳಿ ವಲಯದ 18 ಅಂಗನವಾಡಿ ಮತ್ತು ಶಿಶು ಮಂದಿರದ ಕಾರ್ಯಕರ್ತರು ಮತ್ತು ಸಹಾಯಕಿಯರನ್ನು ಅಭಿನಂದಿಸುವ ಮಾತೃ ದೇವೋ ಭವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗಂಗೊಳ್ಳಿಯ ಉದ್ಯಮಿ ವಿಠ್ಠಲ್ ಜಿ ಶೆಣೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗಂಗೊಳ್ಳಿಯ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನದ ಅಧ್ಯಕ್ಷರಾದ ಭವಾನಿ ಶಂಕರ್ ಖಾರ್ವಿ, ಮತ್ಸ್ಯೋದ್ಯಮಿ ರಾಘವೇಂದ್ರ ವಸಂತ ಮೇಸ್ತ, ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ರಾಜೇಂದ್ರ ಶೇರುಗಾರ, ಗಂಗೊಳ್ಳಿಯ ಉದ್ಯಮಿ ಕಾರ್ತಿಕ್ ಯು ಶೇಟ್ ಮತ್ತು ಶ್ರೀಮತಿ ಸಲೋನಿ ಕಾರ್ತಿಕ್ ಶೇಟ್ ಉಪಸ್ಥಿತರಿದ್ದರು .
ಈ ಸಂದರ್ಭದಲ್ಲಿ ಗಂಗೊಳ್ಳಿ ವಲಯದ ಅಂಗನವಾಡಿ ಕಾರ್ಯಕರ್ತೆಯರಾದ ಫಿಲೋಮಿನಾ ಫರ್ನಾಂಡಿಸ್, ಕಮಲ, ಸಂಗೀತ ಬಿ, ರೇಖಾ, ನಿಖಿತಾ ಭಂಡಾರಿ, ಶೇಷಮ್ಮ ಶೇರುಗಾರ್, ಶೋಭಾ ಎಸ್ ಕೆ, ಸಹನಾ ಕೆ, ಅಂಗನವಾಡಿ ಸಹಾಯಕಿಯರಾದ ಸರೋಜ ಪೂಜಾರಿ, ಸೀಮಾ ಖಾರ್ವಿ, ಶಾಂತಿ ಖಾರ್ವಿ, ರೇಷ್ಮಾ ಖಾರ್ವಿ, ಗೌರಿ, ಸುಜಾತ, ಮುಕಾಂಬು, ಗೌರಿ ಖಾರ್ವಿ ಮತ್ತು ಗಂಗೊಳ್ಳಿಯ ನಿವೇದಿತಾ ಶಿಶು ಮಂದಿರದ ಪ್ರೇಮ ಮತ್ತು ನಾಗರತ್ನ ಇವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಗಂಗೊಳ್ಳಿಯ ಶ್ರೀ ನಾರಾಯಣ ಗುರು ಜನ ಸೇವಾ ಬಳಗದ ಅಧ್ಯಕ್ಷ ಗೋಪಾಲ ಪೂಜಾರಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಇತ್ತೀಚಿಗೆ ನಿಧನರಾದ ಸಾಲುಮರದ ತಿಮ್ಮಕ್ಕನಿಗೆ ನುಡಿ ನಮನಗಳನ್ನು ಅರ್ಪಿಸಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ದಿಯಾ ಜಿ ಪೈ ಪ್ರಾರ್ಥಿಸಿದರು. ಬಳಗದ ಪ್ರಧಾನ ಕಾರ್ಯದರ್ಶಿ ಹರ್ಷೇಂದ್ರ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಕಾರ್ತಿಕ್ ಬಿ ಖಾರ್ವಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೋಶಾಧಿಕಾರಿ ನರೇಂದ್ರ ಎಸ್ ಗಂಗೊಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಗದ ಉಪಾಧ್ಯಕ್ಷೆ ಮಮತಾ ವಂದಿಸಿದರು. ಸನ್ಮಾನಿತರ ಪರವಾಗಿ ಫಿಲೋಮಿನಾ ಫರ್ನಾಂಡಿಸ್ ಅವರು ಶ್ರೀ ನಾರಾಯಣ ಗುರು ಜನಸೇವಾ ಬಳಗಕ್ಕೆ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಐದು ಅದೃಷ್ಟಶಾಲಿ ವಿಜೇತರನ್ನು ಆಯ್ಕೆ ಮಾಡಿ ಬಹುಮಾನಗಳನ್ನು ವಿತರಿಸಲಾಯಿತು.











