ಕುಂದಾಪುರ(ನ,22): ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯನ್ನು ಬೆನ್ನಟ್ಟಿ ನಿರಂತರ ಪ್ರಯತ್ನ ನಡೆಸಿದರ ಅಸಾಧ್ಯವಾದುದು ಯಾವುದೂ ಇಲ್ಲ .38 ವಿದ್ಯಾರ್ಥಿಗಳಲ್ಲಿ 34 ವಿದ್ಯಾರ್ಥಿಗಳು ಸಿಎಸ್ ಫೌಂಡೇಶನ್ (ಸಿಎಸ್ಇಇಟಿ) ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದು ಸುಲಭದ ಮಾತಲ್ಲ. ವಿದ್ಯಾರ್ಥಿಗಳನ್ನು ಈ ಮಟ್ಟಿಗೆ ಸಿದ್ಧಗೊಳಿಸಿದ ಶಿಕ್ಷ ಪ್ರಭಾ ಅಕಾಡೆಮಿ ಮತ್ತು ಸಾಧಕ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದು ಸಿಎಸ್ ರಮ್ಯ ರಾವ್ ಹೇಳುದರು.

ಅವರು ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ಸಿಎ/ ಸಿಎಸ್ ತರಬೇತಿ ಸಂಸ್ಥೆಯಲ್ಲಿ ಸಿಎಸ್ ಪರೀಕ್ಷೆ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದನೆಯ ಮಾತುಗಳನ್ನಾಡಿದರು.ಪ್ರಸ್ತುತ ದಿನಗಳಲ್ಲಿ ಸಿಎಸ್ ಕೋರ್ಸುಗಳಿಗೆ ಬೇಡಿಕೆ ಜಾಸ್ತಿಯಾಗಿದ್ದು, ವಿಶ್ವದಾದ್ಯಂತ ಅವಕಾಶಗಳು ಕೈ ಬೀಸಿ ಕರೆಯುತ್ತಿದೆ. ಕುಂದಾಪುರದಂತಹ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ಜೊತೆಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವುದು ವಿದ್ಯಾರ್ಥಿಗಳ ಇಂತಹ ಸಾಧನೆಗೆ ಪ್ರೇರಕವಾಗಿದೆ ಎಂದು ಅವರು ಹೇಳಿದರು.

ಸಂಸ್ಥೆಯ ಮುಖ್ಯಸ್ಥರಾದ ಪ್ರತಾಪ್ ಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳ ಸಾಧನೆ ಮೆಚ್ಚುವಂತದ್ದು, ಮುಂದಿನ ಹಂತದ ಪರೀಕ್ಷೆಯಲ್ಲೂ ಕೂಡ ಉತ್ತಮ ಫಲಿತಾಂಶ ನೀಡಬೇಕು. ಇದಕ್ಕೆ ಪೂರಕ ವ್ಯವಸ್ಥೆ, ಶಿಕ್ಷ ಪ್ರಭಾ ಸಂಸ್ಥೆ ನೀಡಲಿದೆ. ಅತ್ಯುತ್ತಮ ಶಿಕ್ಷಕರಿಂದ ಉತ್ತಮ ತರಬೇತಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸಿಗಲಿದೆ ಎಂದರು.

ಪೋಷಕರ ಮೆಚ್ಚುಗೆ : ಸಿಎಸ್ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅನೇಕ ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದರು.ಸಾಧಕ ವಿದ್ಯಾರ್ಥಿಯ ಪೋಷಕರು ಮಾತನಾಡುತ್ತಾ ನಾನು ಕೇವಲ ಎಸೆಸೆಲ್ಸಿ ಓದಿರುವ ಒಂದು ಮಗುವಿನ ತಂದೆ, ನನಗೆ ಸಿಎಸ್ ನಲ್ಲಿ ಯಾವೆಲ್ಲಾ ವಿಷಯಗಳಿವೆ ಎನ್ನುವ ಜ್ಞಾನವು ಇಲ್ಲ. ಇಂತಹ ಸಂದರ್ಭದಲ್ಲಿ ನಮ್ಮೆಲ್ಲಾ ವಿದ್ಯಾರ್ಥಿಗಳಿಗೆ ಬೆನ್ನೆಲುಬಾಗಿ ನಿಂತ ಶಿಕ್ಷ ಪ್ರಭಾ ಸಂಸ್ಥೆಯ ಸ್ಥಾಪಕರಿಗೂ, ಬೋಧಕ ಸಿಬ್ಬಂದಿಗಳಿಗೆ ನಾನು ಆಭಾರಿಯಾಗಿದ್ದೇನೆ ಎಂದರು.

ಸಂಸ್ಥೆಯ ಮುಖ್ಯಸ್ಥರಾದ ಪ್ರತಾಪ್ ಚಂದ್ರ ಶೆಟ್ಟಿ, ಭರತ್ ಶೆಟ್ಟಿ ಮತ್ತು ತರಬೇತುದಾರರಾದ ಅಂಕಿತ ಶೆಟ್ಟಿ ಉಪಸ್ಥಿತರಿದ್ದರು.ವಿದ್ಯಾರ್ಥಿ ಶ್ರವಣ್ ಕಾಮತ್ ಧನ್ಯವಾದಗೈದರು. ಸಂಸ್ಥೆಯ ವಿದ್ಯಾರ್ಥಿನಿ ಶ್ರೇಯಾ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.











