ಹೆಮ್ಮಾಡಿ (ಫೆ.15): ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕೇಂದ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ನೂತನ ರಥ ಫೆಬ್ರವರಿ 15 ರಂದು ಕೊಟೇಶ್ವರದಿಂದ ಭವ್ಯ ಪುರಮೆರವಣಿಗೆಯೊಂದಿಗೆ ಶ್ರೀಕ್ಷೇತ್ರ ಕೊಲ್ಲೂರಿಗೆ ತಲುಪಿತು. 400 ವರ್ಷಗಳ ಬಳಿಕ ನಿರ್ಮಾಣಗೊಂಡ ಈ ರಥವನ್ನು ಮುರ್ಡೆಶ್ವರದ ಉದ್ಯಮಿ ದಿ.ಆರ್.ಎನ್.ಶೆಟ್ಟಿ ಅವರ ಪುತ್ರ ಸುನಿಲ್ ಆರ್.ಶೆಟ್ಟಿ ರವರು ಸೇವಾರೂಪದಲ್ಲಿ ನಿರ್ಮಿಸಿಕೊಟ್ಟಿದ್ದು ಮೂಲ ರಥದ ಮಾದರಿಯಲ್ಲೇ ಕೊಟೇಶ್ವರದ ಪ್ರಸಿದ್ದ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ರಥವನ್ನು ನಿರ್ಮಿಸಲಾಗಿದ್ದು, ಫೆ.16ರಂದು ಕೊಲ್ಲೂರಿನಲ್ಲಿ ದಾನಿಗಳ ಸಮ್ಮುಖದಲ್ಲಿ ರಥ ಮೂಕಾಂಬಿಕೆಗೆ ಸಮರ್ಪಣೆಯಾಗಲಿದೆ.
ಬೈಂದೂರು ಶಾಸಕ ಬಿ.ಎಂ .ಸುಕುಮಾರ ಶೆಟ್ಟಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಶಿಲ್ಪಿಗಳಾದ ಲಕ್ಷ್ಮೀನಾರಾಯಣ ಆಚಾರ್ಯ, ರಾಜಶೇಖರ ಆಚಾರ್ಯ ಹಾಗೂ ಧಾರ್ಮಿಕ ಮುಖಂಡರುಗಳು, ದೇವಿಯಭಕ್ತರು ಉಪಸ್ಥಿತರಿದ್ದರು.