ಕುಂದಾಪುರ(ಮೇ, 21): ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕುಂದಾಪುರ ತಾಲೂಕು ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ದಿ. ಪುಳಿಮಾರು ಎಂ ಕೃಷ್ಣಶೆಟ್ಟಿ ಸ್ಮಾರಕ ದತ್ತಿ ಉಪನ್ಯಾಸ ಹಾಗೂ ಯಕ್ಷಪ್ರೇಮಿ ಶ್ರೀ ನಾರಾಯಣ ಸ್ಮರಣಾರ್ಥ ದತ್ತಿ ಪುರಸ್ಕಾರ ಕಾರ್ಯಕ್ರಮ ಕಾಲೇಜಿನ ಶ್ರೀ ಮೂಕಾಂಬಿಕಾ ಸಭಾಂಗಣದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿ ಖ್ಯಾತ ಸಾಹಿತಿ, ಅಂಕಣ ಬರಹಗಾರ್ತಿ ವಸಂತಿ ಶೆಟ್ಟಿ ಬ್ರಹ್ಮಾವರ ಅವರು ಮಾತನಾಡಿ, ಯಕ್ಷಗಾನ ಕಲೆ ಕನ್ನಡದ ಸಂಸ್ಕಾರ, ಸಂಸ್ಕೃತಿಯನ್ನು ಬಿಂಬಿಸುತ್ತದೆ. ಕನ್ನಡ ಸ್ಪಷ್ಟವಾಗಿರುವುದು ಯಕ್ಷಗಾನದಲ್ಲಿ ಮಾತ್ರ. ಇಂದಿನ ಯುವಜನತೆಗೆ ಮೌಲ್ಯ ಶಿಕ್ಷಣ ವರ್ತಮಾನದ ತುರ್ತು ಎಂದರು. ಇದೇ ಸಂದರ್ಭ ವಿವಿಧ ದೃಷ್ಟಾಂತಗಳ ಮೂಲಕ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯದ ಕುರಿತು ವಿವರಿಸಿದರು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ .ಕೆ ಉಮೇಶ್ ಶೆಟ್ಟಿಯವರು ಮಾತನಾಡಿ ಸಾಹಿತ್ಯ, ಕ್ರೀಡೆ, ಶಿಕ್ಷಣ, ಸಾಂಸ್ಕೃತಿಕ ಹಾಗೂ ಉದ್ಯೋಗ ಈ ಪಂಚಮುಖಿ ಶಿಕ್ಷಣದ ಮೂಲಕ ಪಠ್ಯದ ಜೊತೆಗೆ ಪಠ್ಯಪೂರಕವಾದ ಬದುಕಿನ ಶಿಕ್ಷಣವನ್ನು ಕಾಲೇಜಿನಲ್ಲಿ ಬೋಧಿಸಲಾಗುತ್ತದೆ ಎಂದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಶ್ರೀ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಕನ್ನಡ ತಾಲೂಕು ಸಾಹಿತ್ಯ ಪರಿಷತ್ನ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಆಶಯ ನುಡಿಗಳನ್ನಾಡಿದರು.ಗೋಳಿಗರಡಿ ಮೇಳದ ಹಿರಿಯ ಕಲಾವಿದ ಶ್ರೀ ಹಟ್ಟಿಯಂಗಡಿ ಬಸವ ಅವರಿಗೆ ಯಕ್ಷಪ್ರೇಮಿ ಶ್ರೀ ನಾರಾಯಣ ಸ್ಮರಣಾರ್ಥದ ದತ್ತಿ ಪುರಸ್ಕಾರವನ್ನು ನೀಡಲಾಯಿತು.
ಈ ಸಂದರ್ಭ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಮಣ್ಯ ಶೆಟ್ಟಿ, ಕೋಶಾಧಿಕಾರಿ ಮನೋಹರ ಪಿ,ದತ್ತಿದಾನಿ ಉಡುಪಿ ಪುಳಿಮಾರುಮನೆ ಭವಾನಿ ವಿ ಶೆಟ್ಟಿ, ಕನ್ನಡ ಸಂಘದ ಸಹ ಸಂಯೋಜQ ಶ್ವೇತಾ ಬಿ ಉಪಸ್ಥಿತರಿದ್ದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಶ್ರೀ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿ, ಕಸಾಪ ತಾಲೂಕು ಕಾರ್ಯದರ್ಶಿ ದಿನಕರ್ ಆರ್ ಶೆಟ್ಟಿ ಅಭಿನಂದನ ಭಾಷಣ ಮಾಡಿ, ಉಪನ್ಯಾಸಕಿ ರೇಷ್ಮಾ ಶೆಟ್ಟಿ ಸನ್ಮಾನಿತರ ಪರಿಚಯ ಮಾಡಿ, ಕನ್ನಡ ಸಂಘದ ಸಂಯೋಜಕ ಸುಕುಮಾರ್ ಶೆಟ್ಟಿ ಕಮಲಶಿಲೆ ವಂದಿಸಿ, ಉಪನ್ಯಾಸಕಿ ಪ್ರವೀಣಾ.ಎಂ ಕಾರ್ಯಕ್ರಮ ನಿರೂಪಿಸಿದರು.