ಕುಂದಾಪುರ (ಎ.8): ಇಲ್ಲಿಯ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದಿಂದ ಸಿಎ/ಸಿಎಸ್/ ಸಿಎಂಎ ವಿಧ್ಯಾರ್ಥಿಗಳಿಗೆ ಪರೀಕ್ಷಾ ಒತ್ತಡ ನಿರ್ವಹಣೆ ಕುರಿತಾಗಿ ವಿಭಿನ್ನ ಕಾರ್ಯಗಾರ ಹಮ್ಮಿಕೊಳ್ಳಲಾಯಿತು.
ಉಡುಪಿಯ ಆರ್ಟ್ ಆಫ್ ಲಿವಿಂಗ್ ನ ಯೋಗ ಮತ್ತು ಪ್ರಾಣಾಯಾಮ ತರಬೇತುದಾರರಾದ ಶ್ರೀಮತಿ ಶೈಲಜಾ ಕೃಷ್ಣಾನಂದ ಅವರು ಒತ್ತಡ ನಿರ್ವಹಣೆ ಹಾಗು ಏಕಾಗ್ರತೆಯ ಸಾಧನೆಯನ್ನು ಆಸನ ಹಾಗೂ ಪ್ರಾಣಾಯಾಮದ ಮೂಲಕ ಹೇಗೆ ಸಿದ್ಧಿಸಿಕೊಳ್ಳುವುದು ಎನ್ನುವುದರ ಕುರಿತು ಅರಿವು ಮೂಡಿಸಿದರು. ಇದೇ ಸಂದರ್ಭ ವಿವಿಧ ಪ್ರಾತ್ಯಕ್ಷಿಕೆಯ ಮೂಲಕ ವಿಧ್ಯಾರ್ಥಿಗಳಿಗೆ ತರಬೇತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿ ಅವರು ಪ್ರೊಫೆಷನಲ್ ವಿಧ್ಯಾರ್ಥಿಗಳಿಗೆ ಪ್ರತ್ಯೇಕವಾದ ಜೀವನ ಪದ್ಧತಿ ಇರಬೇಕು ಅದರಲ್ಲಿ ಅಗ್ರಸ್ಥಾನದಲ್ಲಿ ಈ ಪ್ರಾಣಾಯಾಮ, ಆಸನ, ಮುದ್ರೆ ಗಳ ಬಳಕೆ ಬಹಳ ಪರಿಣಾಮಕಾರಿ ಎಂದು ಶುಭಾಶಂಸನೆ ಮಾತುಗಳನ್ನಾಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವೀಣಾ ವಿ.ಭಟ್ ಹಾಗೂ ಕಾರ್ಯಕ್ರಮ ಸಂಯೋಜಕರಾದ ಸುಹಾಸ್ ಜಟ್ಟಿಮನೆ ಮತ್ತು ಶ್ವೇತ ಭಂಡಾರಿ ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.ಕಾಲೇಜಿನ ತೃತೀಯ ಬಿಕಾಮ್ ನ ವಿದ್ಯಾರ್ಥಿನಿ ಪವಿತ್ರ ಪೈ ನಿರೂಪಿಸಿದರು.